ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಟಿಎಪಿಸಿಎಂಎಸ್ನ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಅನಸೂಯ ಅವರನ್ನು ಆಡಳಿತ ಅಧಿಕಾರಿಯನ್ನಾಗಿ ನೇಮಕ ಮಾಡಿ ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಸಂಘದ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಲು ಹಾಗೂ ಸಹಕಾರ ಸಂಘಗಳ ಕಾಯಿದೆ, ನಿಯಮಾನುಸಾರ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿ ರಚಿಸಿ ಅಧಿಕಾರ ಹಸ್ತಾಂತರಿಸಲು ಆಡಳಿತಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಸಹಾಯಕ ನಿಬಂಧಕಿ ಅನಸೂಯ ಮಾತನಾಡಿ, ”ಟಿಎಪಿಸಿಎಂಎಸ್ ವಿರುದ್ಧ ಅಸಮರ್ಪಕ ಕಾರ್ಯನಿರ್ವಹಣೆ ಸಂಬಂಧ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂ೩೦(೨) ಕ್ರಮ ಕೈಗೊಂಡು ಆದೇಶ ಹೊರಡಿಸಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಆರೋಪಗಳು ಕೇಳಿ ಬಂದಿದ್ದು, ಲೋಪದೋಷಕ್ಕೆ ಸಮರ್ಪಕ ಸಮಜಾಯಿಷಿ ಇಲ್ಲದ ಕಾರಣ ಆಡಳಿತಾಧಿಕಾರಿಯಾಗಿ ೩ ತಿಂಗಳ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ಲೋಪದೋಷ ಸರಿಪಡಿಸಿ ನ್ಯೂನತೆಗಳ ಬಗ್ಗೆ ಕ್ರಮ ಕೈಗೊಂಡು ಎರಡು ಅಥವಾ ಮೂರು ತಿಂಗಳಲ್ಲಿ ನೂತನ ಆಡಳಿತ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.
೧೫ ನಿರ್ದೇಶಕರು: ಸಂಘವು ಒಟ್ಟು ೧೫ ನಿರ್ದೇಶಕ ಸ್ಥಾನವನ್ನು ಹೊಂದಿದ್ದು, ಇದರಲ್ಲಿ ೧೨ ಮಂದಿ ಚುನಾಯಿತ ನಿರ್ದೇಶಕರು, ೧ ಸರಕಾರಿ ನಾಮನಿರ್ದೇಶಿತ, ೧ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಹಾಗೂ ೧ ಎಆರ್ಸಿಎಸ್ ಆಗಿರುತ್ತಾರೆ. ಈಗಾಗಲೇ ಕಾಂಗ್ರೆಸ್ ಬೆಂಬಲಿತ ೬ ನಿರ್ದೇಶಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.